ತುಳು ರಂಗಭೂಮಿಗೆ ಬೀಸಿದ ಬದಲಾವಣೆಯ ಬಿರುಗಾಳಿ – ಲಯನ್ ಕಿಶೋರ್ ಡಿ ಶೆಟ್ಟಿಯವರ ಶ್ರೀಲಲಿತೆ ತಂಡದ ” ಗರುಡ ಪಂಚೆಮಿ “

ತುಳು ರಂಗಭೂಮಿಗೆ ಬೀಸಿದ ಬದಲಾವಣೆಯ ಬಿರುಗಾಳಿ – ಲಯನ್ ಕಿಶೋರ್ ಡಿ ಶೆಟ್ಟಿಯವರ ಶ್ರೀಲಲಿತೆ ತಂಡದ ” ಗರುಡ ಪಂಚೆಮಿ “

ಪುರಭವನದಲ್ಲಿ ೨೮/೧೧/೨೨ ರಂದು ನಡೆದ
” ಗರುಡ ಪಂಚೆಮಿ ” ನಾಟಕವನ್ನು ನೋಡಿದ ಬಳಿಕ ಕೆಲವೊಂದು ವಿಚಾರಗಳನ್ನು ಹೇಳಲೇಬೇಕೆಂದು ಈ ಲೇಖನವನ್ನು ಬರೆಯುತ್ತಿದ್ದೇನೆ . ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಗೆ ಮೊದಲೇ ಸಾಕಷ್ಟು ಸದ್ದು ಮಾಡಿದ ಈ ನಾಟಕದ ಬಗ್ಗೆ ಬಹಳಷ್ಟು ನಿರೀಕ್ಷೆ – ಕುತೂಹಲ ಮೂಡಿತ್ತು . “ಪೊಸ ದೇಖಿದ ತುಳು ನಾಟಕ ” ಎಂಬ ಘೋಷ ವಾಕ್ಯವನ್ನು ಪ್ರಕಟಿಸಿದ ” ಶ್ರೀಲಲಿತೆ ” ತಂಡ ತನ್ನ ಮಾತನ್ನು ನೂರು ಪ್ರತಿಶತ ಉಳಿಸಿಕೊಂಡಿದೆ . ಖಂಡಿತವಾಗಿಯೂ ಇದು ಒಂದು ಹೊಸತನದ ಪ್ರಯೋಗವೇ ಸರಿ . ತುಳು ರಂಗ ಭೂಮಿಯಲ್ಲಿ ಈವರೆಗೆ ಕಂಡು ಕೇಳರಿಯದ ಅದ್ಭುತ ದೃಶ್ಯ ಪ್ರಯೋಗ . ನಾಟಕ ಪ್ರಾರಂಭವಾಗುವ ತೆರೆದುಕೊಂಡ ದೃಶ್ಯ ಒಂದು ಅದ್ಭುತವಾದ ಅರಮನೆ . ಹಿನ್ನೆಲೆ ಸಂಗೀತದೊಂದಿಗೆ ವಿಶಿಷ್ಟವಾದ ಬೆಳಕಿನ ಸಂಯೋಜನೆಯಲ್ಲಿ ದೃಶ್ಯ ತೆರೆದುಕೊಂಡಾಗ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಕುಳಿತ ಅನುಭವ . ಬಣ್ಣ ಬಣ್ಣದ ಬೆಳಕು ….. ವೇಷಭೂಷಣ ಅತ್ಯಾಧುನಿಕ ಧ್ವನಿ ತಂತ್ರಜ್ಞಾನವನ್ನು ಬಳಸಿಕೊಂಡ ರೀತಿ ….. ಯಾವುದೋ ಭ್ರಮಾ ಲೋಕಕ್ಕೆ ಕೊಂಡೊಯ್ಯಿತು . ರಂಗದಲ್ಲಿ ಬೆಳಕು ಆರಿ ಕತ್ತಲಾದಾಗಲಷ್ಟೇ ತಿಳಿದಿದ್ದು …. ದೃಶ್ಯ ಮುಗಿಯಿತು ಎಂದು . ಮುಂದಿನದ್ದು ವಿಸ್ಮಯ . !! ಕ್ಷಣಾರ್ಧದಲ್ಲಿ ರಂಗದಲ್ಲಿ ಬೆಳಕು ಮೂಡಿದಾಗ ಕಂಡದ್ದು ……ಭಯಾನಕವಾದ ಕಾಡು !!! ಬಣ್ಣ ಬಣ್ಣದ ಅರಮನೆ ಕಗ್ಗತ್ತಲ ಕಾಡಾಗಿ ಕ್ಷಣಾರ್ಧದಲ್ಲಿ ಮಾರ್ಪಾಡಾಗಿದ್ದು ಅದ್ಭುತವಾದ ರಂಗ ತಂತ್ರಕ್ಕೆ ಸಾಕ್ಷಿ . ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ , ನಾವು ಇದುವರೆಗೆ ಎಲ್ಲಾ ನಾಟಕಗಳಲ್ಲಿ ದೃಶ್ಯಗಳ ಬದಲಾವಣೆ ( ಸೆಟ್ಟಿಂಗ್ ಸೇರಿ ) ಗಳನ್ನು ನೋಡುತ್ತಿದ್ದೆವು . ಆದರೆ ಇಲ್ಲಿ ಸಂಪೂರ್ಣ ” ರಂಗ ವೇದಿಕೆಯೇ ” ಬದಲಾಗಿತ್ತು . ವೇದಿಕೆಯಲ್ಲಿರುವ ಸೈಡ್ ವಿಂಗ್ಸ್ ಗಳು ಕೂಡ ಬದಲಾಗಿದ್ದು ಮಾಯಾ ಜಾಲವಾಗಿತ್ತು . ಅದು ಹೇಗೆ ಎಂಬುವುದು ಅರ್ಥವಾಗುತ್ತಿಲ್ಲ . ಏನೇ ಇದ್ದರೂ ಇಂತಹ ಅದ್ಭುತ ರಂಗ ತಂತ್ರವನ್ನು ಪ್ರಪ್ರಥಮ ಬಾರಿಗೆ ತುಳು ರಂಗಭೂಮಿಗೆ ಪರಿಚಯಿಸಿದ ” ಲಯನ್ ಕಿಶೋರ್ ಡಿ ಶೆಟ್ಟಿ ಯವರು ” ಅಭಿನಂದನಾರ್ಹರು .

ಮುಂದಿನದೆಲ್ಲಾ ಒಂದು ಅವರ್ಣನೀಯ ಅನುಭವ . ಎರಡು ಘಂಟೆ ೨೫ ನಿಮಿಷಗಳು ಕಳೆದದ್ದೇ ತಿಳಿಯಲಿಲ್ಲ . ಕಣ್ಣು ಮುಚ್ಚಿ ತೆರೆಯುವುದರೊಳಗೆ ಬದಲಾಗುವ ಚಿತ್ರ ವಿಚಿತ್ರ ದೃಶ್ಯಗಳು , ರಂಗ ಮಧ್ಯದಲ್ಲಿ ಮುದುಕಿಯೂ ಮಾಯವಾಗಿ ಪ್ರೇತವಾಗುವುದು ಅಂತರಿಕ್ಷದಿಂದ ಸೃಷ್ಟಿಯಾಗುವ ವಸ್ತುಗಳು ರಂಗದಲ್ಲಿ ಮೋಹಿನಿ …ಪ್ರೇತಗಳ ಓಡಾಟ , ಪ್ರತ್ಯಕ್ಷ – ಮಾಯ . ಒಟ್ಟಾರೆಯಾಗಿ ಇಡೀ ನಾಟಕವು 3D ಚಲನಚಿತ್ರವನ್ನು ವೀಕ್ಷಿಸಿದ ಅನುಭವವಾಗಿತ್ತು .

ಶ್ರೀಲಲಿತೆ ತಂಡದ ಎಲ್ಲಾ ಕಲಾವಿದರು ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ . ಹಿರಿಯ ರಂಗ ಕಲಾವಿದರಾದ ಸರೋಜಿನಿ ಶೆಟ್ಟಿ ಮತ್ತು ಜೀವನ್ ಉಳ್ಳಾಲ್ರವರ ಅಭಿನಯ ಮನೋಜ್ಞವಾಗಿತ್ತು . ಅದರಲ್ಲೂ ಜೀವನ್ ಉಳ್ಳಾಲ ರವರ “” ಮಹಾ ಮಾಂತ್ರಿಕ ಜಾತವೇದ “” ನಾಗಿ ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಸಂಭಾಷಣೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ . ಅವರ ” ಶಿವನೇ …ಶಿವ .. ” ಡೈಲಾಗ್ ಶೀಘ್ರದಲ್ಲೇ ವೈರಲ್ ಆಗುವುದಂತೂ ಖಂಡಿತ . ಉಳಿದಂತೆ ಕಥಾ ನಾಯಕನಾಗಿ ರೋಹಿತ್ ಶೆಟ್ಟಿ , ನಾಯಕಿಯಾಗಿ ಸ್ನೇಹ ಕುಂದರ್ ಮನ ಗೆಲ್ಲುತ್ತಾರೆ. ಇಬ್ಬರಿಗೂ ಕಲಾರಂಗದಲ್ಲಿ ಉತ್ತಮ ಭವಿಷ್ಯವಿದೆ . ಮೋಹನ್ ಕೊಪ್ಪಳ, ಯಾದವ ಮಣ್ಣಗುಡ್ಡೆ , ಶಿವಕುಮಾರ್ ರೈ , ಹರೀಶ್ ಪಣಂಬೂರು , ತಾರಾನಾಥ್ ಉರ್ವ , ಪ್ರದೀಪ್ ಆಳ್ವ , ನಿತೀಶ್ ಶೆಟ್ಟಿ , ನವೀನ್ ಶೆಟ್ಟಿ ಅಂಬ್ಲಮೊಗರು , ಅಶ್ವಿನ್ ರೈ , ಮಂಜು ಕಾರ್ಕಳ ಮುಂತಾದ ಪ್ರಬುದ್ಧ ರಂಗ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ ದೃಶ್ಯ ಬದಲಾವಣೆಯಲ್ಲೂ ಕೈ ಜೋಡಿಸುತ್ತಾರೆ ಎಂದು ತಿಳಿದಾಗ ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ . ಇನ್ನು ಮುಖ್ಯವಾಗಿ ನಾಟಕದ ಯಶಸ್ಸಿನಲ್ಲಿ ಸೆಟ್ ವರ್ಕರ್ಸ್ ಮತ್ತು ಲೈಟ್ ಆಪರೇಟರ್ ರವರ ಪಾತ್ರ ಮಹತ್ವದ್ದಾಗಿದೆ ಅವರು ಕೂಡ ಅಭಿನಂದನಾರ್ಹರು.

ಇನ್ನು ನಾಟಕದ ತಾಂತ್ರಿಕ ವಿಚಾರವನ್ನು ಗಮನಿಸುವುದಾದರೆ ಹಿನ್ನೆಲೆ ಸಂಗೀತ ಸೂಪರ್ . ಕಾವ್ಯಶ್ರೀ ಅಜೆಕಾರ್ ರವರು ಶೀರ್ಷಿಕೆ ಗೀತೆ ನಾಟಕಕ್ಕೆ ಪ್ರಾರಂಭದಲ್ಲೇ ಒಂದು ಗತ್ತು ತರುತ್ತದೆ . ಡಾ. ವೈಷ್ಣವಿ ಕಿಣಿಯವರು ಹಾಡಿದ ” ಮೋಹಿನಿಯ ಹಾಡು ” ನಮ್ಮನ್ನು ಯಾವುದೋ ಯಕ್ಷ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ . ಸಾಹಿತ್ಯ ಸಂಭಾಷಣೆ ಅದ್ಭುತ .

ಕೊನೆಯ ಮಾತು . ಈ ” ಗರುಡ ಪಂಚೆಮಿ ” ನಾಟಕಕ್ಕೆ ಕಿಶೋರ್ ಡಿ ಶೆಟ್ಟಿಯವರು ಹಾಕಿದ ಬಂಡವಾಳ ಬರೋಬ್ಬರಿ ೧೫ ಲಕ್ಷ ರೂಪಾಯಿ ಎಂಬ ವಿಷಯ ತಿಳಿದಾಗ ನಾನವರಲ್ಲಿ ಕೇಳಿದೆ …. ” ನಮ್ಮಂತಹ ಬಡ ರಂಗ ಭೂಮಿಗೆ ಇಷ್ಟು ದೊಡ್ಡ ಬಂಡವಾಳ ಬೇಕಿತ್ತೆ .. ?? ” ಅದಕ್ಕೆ ಅವರು ಕೊಟ್ಟ ಉತ್ತರ .. ” ನಾನು ಇದುವರೆಗೂ ಹಣದ ಹಿಂದೆ ಹೋದವನಲ್ಲ . ಹಾಕಿದ ದುಡ್ಡು ಹಿಂದೆ ಬರುತ್ತದೆ ಎಂಬ ನಿರೀಕ್ಷೆಯೂ ನನಗಿಲ್ಲ . ಇಂತಹ ಅದ್ಭುತವಾದ ನಾಟಕಗಳು ನಮ್ಮ ದೇಶದಲ್ಲಿ ಮಾತ್ರವಲ್ಲ …. ಪ್ರಪಂಚದಲ್ಲಿ ಎಲ್ಲೇ ಇದ್ದರೂ ಅದನ್ನು ನಾನು ತುಳು ಭಾಷೆಗೆ ತರುತ್ತೇನೆ ಒಟ್ಟಿನಲ್ಲಿ ನನ್ನ ತುಳು ರಂಗಭೂಮಿ ನಿಂತ ನೀರಾಗಬಾರದು. ಅದು ಶ್ರೀಮಂತವಾಗಲೇಬೇಕು “.

ತುಳು ಪ್ರೇಕ್ಷಕರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬಾರದ ನಾಟಕ ” ಗರುಡ ಪಂಚೆಮಿ ”
ಲಯನ್ ಶಾಂತಿ ಶೆಣೈ
ಮಂಗಳೂರು

Latest News

Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read