ದಾಮಾಯಣದ ಪೋಸ್ಟರ್ ಬಿಡುಗಡೆ ಮಾಡಿದರು ರಿಷಭ್ ಶೆಟ್ಟಿ

ದಾಮಾಯಣದ ಪೋಸ್ಟರ್ ಬಿಡುಗಡೆ ಮಾಡಿದರು ರಿಷಭ್ ಶೆಟ್ಟಿ

April 3: ಹೆಸರಿನಿಂದಲೇ ಗಮನ ಸೆಳೆದ ‘ದಾಮಾಯಣ’ ಚಲನಚಿತ್ರವೀಗ ತನ್ನ ಚೊಚ್ಚಲ ಪೋಸ್ಟರ್ ಬಿಡುಗಡೆ ಮಾಡಿದೆ. ಬಹು ನಿರೀಕ್ಷೆ ಹುಟ್ಟಿಸುವಂತಿರುವ ಈ ಪೋಸ್ಟರ್ ಸಿನಿ ರಸಿಕರ ಹುಬ್ಬೇರುವಂತೆ ಮಾಡಿದೆ.
ಹಳ್ಳಿಯ ರಸ್ತೆಯಲ್ಲಿ ಸಪ್ಪಗೆ ದಾರಿ ಮರೆತಂತೆ ನಿಂತಿರುವ ಯುವಕ. ನಗು ತರಿಸುವ ಮುಖ. ಹೆಗಲಲ್ಲಿ ಹಳೆಯ ಕಡು ಹಸಿರು ಬಣ್ಣದ ಬ್ಯಾಗು. ಪಕ್ಕದಲ್ಲೊಂದು ಖಾಲಿ ಆಟೋ ರಿಕ್ಷಾ. ಆಗಸದಲ್ಲಿ ಚಿತ್ರ ಶೀರ್ಶಿಕೆ. ಮೈಲಿಗಲ್ಲಿನಲ್ಲಿ ‘Coming Soon’ ಎಂಬ ಬರಹ. ಇದು ದಾಮಾಯಣದ ಮೊದಲ ಪೋಸ್ಟರ್ನಲ್ಲಿ ಕಂಡುಬಂದ ದೃಶ್ಯ.

ಪೋಸ್ಟರನ್ನು ಕಿರಿಕ್ ಪಾರ್ಟಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿಯ ನಿರ್ದೇಶಕ-ನಟ ರಿಷಭ್ ಶೆಟ್ಟಿಯವರು ಬಿಡುಗಡೆ ಮಾಡಿದರು. ಪೋಸ್ಟರ್ ಬಿಡುಗಡೆಗೂ ಮುನ್ನ ತಂಡಕ್ಕೆ ಯಶಸ್ಸನ್ನು ಕೋರಿದ ಅವರು ಪೋಸ್ಟರ್ ಬಿಡುಗಡೆಯ ನಂತರ ಮಾತನಾಡಿ “ಪೋಸ್ಟರ್ ತುಂಬಾ ಕುತೂಹಲ ಮೂಡಿಸುವಂತಿದ್ದು, ಚಲನಚಿತ್ರವು ನೈಜತೆಯಿಂದ ಕೂಡಿರುವಂತೆ ತೋರುತ್ತಿದೆ.” ಎಂದು ಅಭಿಪ್ರಾಯಪಟ್ಟರು.
‘ದಾಮಾಯಣ’ದ ಹೆಸರಿಗೆ ಹೇಳಿ ಮಾಡಿಸಿದಂತಿರುವ ಈ ಕ್ರೀಯಾಶೀಲ ಪೋಸ್ಟರನ್ನು ಆದರ್ಶ್ ಮೋಹನ್‍ದಾಸ್‍ರವರು ವಿನ್ಯಾಸ ಮಾಡಿದ್ದಾರೆ. “ನಾವು ಹೇಳಲು ಹೊರಟಿರುವ ಕಥೆಗೆ ಈ ಪೋಸ್ಟರ್ ಮುನ್ನುಡಿ ಇದ್ದಂತೆ. ಇದನ್ನು ಆದರ್ಶ್‍ರವರು ಸುಂದರವಾಗಿ ರೂಪಿಸಿದ್ದಾರೆ. ಕಥೆಯ ಸಾರಾಂಶ ತಿಳಿದುಕೊಂಡ ಆದರ್ಶ್ ಮೋಹನ್‍ದಾಸ್‍ರವರು ಕೇವಲ ಒಂದೇ ಪ್ರಯತ್ನದಲ್ಲಿ ನಮ್ಮನ್ನು ತೃಪ್ತಿಗೊಳಿಸಿದರು.” ಎಂದು ನಿರ್ದೇಶಕ ಶ್ರೀಮುಖ ಹೆಮ್ಮೆಯಿಂದ ತಿಳಿಸಿದರು.
ತಂಡಕ್ಕೆ ಏಪ್ರಿಲ್ 1 ವಿಶೇಷ ದಿನವಂತೆ. ದಾಮಾಯಣ ಚಲನಚಿತ್ರವು ಮೂರ್ಖನೊಬ್ಬನ ಕನಸುಗಳು ಹಾಗು ವಾಸ್ತವದ ನಡುವೆ ಚಲಿಸುವ ಒಂದು ಕಥೆ. ಇದೇ ಕಾರಣಕ್ಕೆ ಮೂರ್ಖರ ದಿನವನ್ನೇ ಚಿತ್ರತಂಡ ಪೋಸ್ಟರ್ ಬಿಡುಗಡೆಗೆ ಆಯ್ಕೆ ಮಾಡಿತ್ತು. ಸದ್ಯದಲ್ಲೇ ಮೊದಲ ಟೀಸರ್ ಬಿಡುಗಡೆ ಮಾಡಲಿರುವ ಮಂಗಳೂರಿನ ಈ ತಂಡ- ಅದಕ್ಕಾಗಿ ಸಿದ್ಧತೆ ನಡೆಸುತ್ತಿದೆ.

Latest News