ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಾಮಗಾರಿಗಳಿಗೆ ಸ್ಥಳೀಯರ ಮೂಲಕ ಗುದ್ದಲಿಪೂಜೆ

ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಾಮಗಾರಿಗಳಿಗೆ ಸ್ಥಳೀಯರ ಮೂಲಕ ಗುದ್ದಲಿಪೂಜೆ

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್`ಗಳಾಗಿ 45 ಲಕ್ಷದ ವಿವಿಧ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯರ ಮೂಲಕ ಇಂದು ಗುದ್ದಲಿಪೂಜೆ ನೆರವೇರಿತು.
ಈ ಕುರಿತು ಮಾತನಾಡಿದ ಶಾಸಕರು, ಸ್ಥಳೀಯರ ಬೇಡಿಕೆಯ ಪ್ರಕಾರ ಹಲವಾರು ಕಾಮಗಾರಿಗಳಿಗೆ ಇಂದು ಸ್ಥಳೀಯರ ಮೂಲಕ ಗುದ್ದಲಿಪೂಜೆ ನೆರವೇರಿಸಿದ್ದೇವೆ. 45 ಲಕ್ಷ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಶೀಘ್ರವೇ ಪ್ರಾರಂಭವಾಗಲಿದೆ ಎಂದರು.

ಕದ್ರಿ ದಕ್ಷಿಣ ವಾರ್ಡಿನಲ್ಲಿ ಸಿ.ವಿ ನಾಯಕ್ ಸಭಾಂಗಣದಿಂದ ಜಿ.ಎಸ್.ಬಿ ಕಾಲೋನಿ ಬಳಿ ರಸ್ತೆ ಅಭಿವೃದ್ಧಿ, ದೇರೆಬೈಲ್ ದಕ್ಷಿಣ ವಾರ್ಡಿನ ರಾಮಾಂಜನೇಯ ಭಜನಾ ಮಂದಿರದ ಬಳಿ ರಸ್ತೆ ಡಾಮರೀಕರಣ, ಪದವು ಸೆಂಟ್ರಲ್ ವಾರ್ಡ್ ಶಕ್ತಿನಗರ ಮುಖ್ಯ ರಸ್ತೆಯಿಂದ ಕುಚ್ಚಿಕಾಡ್ ವರೆಗಿನ ರಸ್ತೆ ಡಾಮರೀಕರಣ, ಶಕ್ತಿನಗರ ಪದವು ಗ್ರಾಮದ ಮಹಾಕಾಳಿ ಪಂಚಮಹಲ್ ಬಳಿ ವಿನು ಅಪಾರ್ಟ್‌ಮೆಂಟ್ ಮುಂಬಾಗದ ರಸ್ತೆ ಅಭಿವೃದ್ಧಿ ಕಾಮಗಾರಿ, ಮರೋಳಿ ವಾರ್ಡಿನಲ್ಲಿ ತೋಡು ದುರಸ್ತಿ ಕಾಮಗಾರಿ,ಮರೋಳಿ ಕನಪತಗ್ಗುವಿನಲ್ಲಿ ತಡೆಗೋಡೆ ದುರಸ್ತಿ ಕಾಮಗಾರಿ, ವೆಲೆನ್ಸಿಯಾ ವಾರ್ಡಿನ ನಾಗುರಿ ಗುಡ್ಡೆತೋಟ ಒಳಗಡೆ ರಸ್ತೆ ಅಭಿವೃದ್ಧಿ ಕಾಮಗಾರಿ,ಪಂಪ್ವೆಲ್ 1ನೇ ಅಡ್ಡರಸ್ತೆ ಬಳಿ ತಡೆಗೋಡೆ ರಚನೆ ಹಾಗೂ ಜಪ್ಪಿನಮೊಗರು ವಾರ್ಡಿನ ಕಂರ್ಬಿಸ್ಥಾನ ದೇವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Latest News